ಇವಳ ಮಾತು ಕೇಳಿ ಅಜ್ಜಿ - ಅಂಬುಜಮ್ಮ ಒಬ್ಬರ ಮುಖ ಒಬ್ಬರು ನೋಡಿಕೊಂಡು ನಕ್ಕರೇ ವಿನಾ ಮರುಮಾತಾಡಲಿಲ್ಲ. ಅಜ್ಜಿ ಹಿಟ್ಟು ಬೀಸಿದ್ದು ಮುಗಿದ ಕೂಡಲೇ ಅಲ್ಲಿಂದ ಹೊರಟು ಬೇಗ ಬೇಗನೆ ಮನೆಗೆ ನಡೆಯುತ್ತಿದ್ದರು. ರುಕ್ಕೂಗೆ ಅವರ ಹೆಜ್ಜೆಗೆ ತಕ್ಕ ಹಾಗೆ ಹೆಜ್ಜೆ ಹಾಕುವುದು ಸ್ವಲ್ಪ ಕಷ್ಟವೇ ಆಯಿತು. ಹೆಚ್ಚು ಕಡಿಮೆ ಓಡಿಕೊಂಡೇ ಬರಿತ್ತಿದ್ದಳು.
"ಇದೇನಜ್ಜಿ ಇಷ್ಟೊಂದು ಅರ್ಜೆಂಟಾಗಿ ಬರ್ತಾ ಇದ್ದೀರ?"
"ಸ್ವಲ್ಪ, ಡಿಕಾಷ್ಕನ್ ಹಾಕಿ ಇಡಾಣ ನಡೆಯಮ್ಮೋ, ಇನ್ನು ಆಯಪ್ಪ ಬಂದರೆ ಕಾಯಿಸಬೇಕಾಗತ್ತೆ ಪಾಪ..."
"ಯಾರು? ಮುನಿಶ್ಯಾಮಪ್ಪ ತಾತ ತಾನೆ? ನೀನ್ಯಾಕೆ ಅವರಿಗೆ ದಿನಾ ಕಾಫಿ ಮಾಡಿಕೊಡೋದು? ಅವರ ಮನೇಲಿ ಅವರು ಕುಡೀಬೇಕಪ್ಪ. ಬಂದ್ರೆ ಸ್ವಲ್ಪ ಕಾಯ್ಲಿ ಬಿಡು..." ದಿನನಿತ್ಯ ಅಜ್ಜಿ ಮುನಿಶ್ಯಾಮಪ್ಪ ತಾತ ಉರುಫ್ ಊರ ಗೌಡರಿಗೆ ಇಷ್ಟೇ ಕಳಕಳಿಯಿಂದ ಕಾಫಿ ಮಾಡಿಕೊಡುವುದು ನೋಡಿದರೆ, ರುಕ್ಕೂಗೆ ಸ್ವಲ್ಪ ಹೊಟ್ಟೆಕಿಚ್ಚು ಹುಟ್ಟುತ್ತಿತ್ತು. ತಿರುಗೀ ಅದೇ ಸುದ್ದಿ ಕೇಳಿ, ಅಜ್ಜಿ ಹಿಂದೆ ಓಡಿ ಬರೋದನ್ನು ನಿಲ್ಲಿಸಿ, ಮೂರಡಿ ಹಿಂದಕ್ಕೆ ನಿಧಾನವಾಗಿ ಹೆಜ್ಜೆ ಹಾಕತೊಡಗಿದಳು.
"ಯೋಯ್, ಅಂಗಂತಾರಾ? ಓಹೋಹೋ, ಈ ಕಾಲದವರು ನೀವೆಲ್ಲಾ..." ಅಜ್ಜಿ ಸ್ವಲ್ಪ ಜೋರಾಗಿಯೇ ಗದರಿ ಮುಂದು ಮುಂದಕ್ಕೆ ನಡೆದರು.
ರುಕ್ಕೂಗೆ ಈಗ ಕಣ್ಣನೀರು ಕೆನ್ನೆಮೇಲೆ ಬರುವುದೊಂದೇ ಬಾಕಿ. ತಾನು ಜೋರಾಗಿ ಮಾತನಾಡಿದ್ದು ನೆನಪಾಗಿ, ಅಜ್ಜಿ ಹಿಂದಕ್ಕೆ ತಿರುಗಿ, ಬಗ್ಗಿ ಮೆಲ್ಲಗೆ, ಬಾಯಿಯ ಅರ್ಧಭಾಗವನ್ನಷ್ಟೇ ಬಳಸಿಕೊಂಡು "ನಿಮ್ಮ ತಾತಂಗೆ ಬೇಕಬೇಕಾದ ಪೈಸೆ ಎಣಿಸಿದ್ದಾರಮ್ಮ ಅವರು, ಬಾ, ಮಣಿಪಾಯಸ ಮಿಕ್ಕಿದ್ದರೆ ಬಿಸಿ ಮಾಡಿ ಕೊಡ್ತೀನಿ ನಿಂಗೆ" ಎಂದರು. ರುಕ್ಕೂ ಮುಂದೆ ಹೋಗಿ ಅಜ್ಜಿ ಕೈ ಹಿಡಿದು ಮತ್ತೆ ಓಡಲು ಶುರುಮಾಡಿದಳು.
ಈಗ್ಗೆ ಇಪ್ಪತೈದು ವರ್ಷಗಳ ಹಿಂದಿನ ಮಾತು, ತಾತ ತನ್ನ ತಾಯಿಯ ತಿಥಿ ಮಾಡಬೇಕಿತ್ತು. ಐವತ್ತು ರೂಪಾಯಿಯನ್ನು ಜೇಬಿಗಿಟ್ಟುಕೊಂಡು ಹೊರಟಿದ್ದರು. ಪೇಟೆಗೆ ಹೋಗುವಷ್ಟರಲ್ಲಿ ನೋಟೇ ಪತ್ತೆ ಇಲ್ಲ. ನಡೆದುಕೊಂಡೇ ವಾಪಸ್ಸು ಬಂದವರು ಸೀದಾ ಹೋಗಿದ್ದು ಮುನಿಶ್ಯಾಮಪ್ಪ ಗೌಡನ ಮನೆಗೆ. ಹೀಗೆ ಹೀಗೆ ಎಂದು ಹೇಳಿದರು. ಮುನಿಶ್ಯಾಮಪ್ಪ ಮರುಮಾತಾಡದೆ ಐವತ್ತು ರೂಪಾಯಿ ತೆಗೆದುಕೊಟ್ಟ. ಅಲ್ಲಿಗೆ ತಾತನ ಕಷ್ಟ ಪರಿಹಾರವಾಯಿತು. ಐವತ್ತು ರೂಪಾಯಿಯಲ್ಲಿ ತಿಥಿ ಮಾಡಬಹುದಾಗಿದ್ದ ಕಾಲವಾಗಿತ್ತೇನೋ ಅದು? ಇಷ್ಟೇ ಅಲ್ಲ, ತಾತನಿಗೆ ಆಗಾಗ ಇಂತಹ ’ಧನಸಹಾಯ’ ಇವರಿಂದ ಆಗುತ್ತಲೇ ಇರುತ್ತದೆ. ಬರಗಾಲ ಬಂದಾಗ ತಾತನ ಓಬಿರಾಯನ ಸಂಬಂಧಿಕರಿಗೆಲ್ಲಾ ಒಮ್ಮಿಂದೊಮ್ಮಿಗೇ ಇವರ ನೆನಪು ಬಂದು, ಹೆಂಡತಿ ಮಕ್ಕಳನ್ನು ಇಲ್ಲೇ ಬಿಟ್ಟಿದ್ದರು. ತಮ್ಮ ತವರೂರಿಗೆ ’ಅಪರೂಪಕ್ಕೆ’ ಬಂದಿಂದ ಹೆಣ್ಣುಮಕ್ಕಳನ್ನು ಯಾರೂ ಮಾತನಾಡಿಸುವ ಹಾಗೇ ಇರಲಿಲ್ಲ. ಹಾಗೆ ಅವರ ಮಕ್ಕಳಿಗೆ ಸೇವೆಯಲ್ಲಿ ಸ್ವಲ್ಪವೂ ಲೋಪವಾಗುವ ಹಾಗಿರಲಿಲ್ಲ. ಸರಿ ಸುಮಾರು ಇಪ್ಪತ್ತು ಮಕ್ಕಳಿದ್ದಿರಬಹುದು ಆ ಗ್ಯಾಂಗಿನಲ್ಲಿ. ಹೊತ್ತಿಗೊತ್ತಿಗೆ ಅಷ್ಟು ಜನಕ್ಕೆ ಮುದ್ದೆ ತೊಳಸಿ ಹಾಕುವುದೇ ಅಜ್ಜಿಗೊಂದು ಮಹಾಕಷ್ಟವಾಗಿತ್ತು. ಇಂತಹ ಸಮಯದಲ್ಲೂ ಮುನಿಶ್ಯಾಮಪ್ಪನೇ ತಾತನಿಗೆ ನೆರವಾಗಿದ್ದವನು.
ಗೌಡನಿಗೆ ತನ್ನ ಮನೆಯಲ್ಲಿ ಮಾಡುವ ಕಾಫಿ ಸರಿಬರುತ್ತಿರಲಿಲ್ಲ. ವರ್ಷಗಟ್ಟಲೆಯಿಂದ ಅಜ್ಜಿಯ ಮನೆಯಲ್ಲಿ ನಿತ್ಯ ಸಂಜೆ ಕಾಫಿ ಕುಡಿಯುವುದು ಅಭ್ಯಾಸವಾಗಿಬಿಟ್ಟಿತ್ತು. ಅವರು ಮಾಡಿದ ಸಹಾಯಕ್ಕೆ ಒಂದು ಲೋಟ ಕಾಫಿ ಏನು ಮಹಾ ಎಂದು ಇವರು, ಅವರು ಕೊಡುವ ’ಕಾಸ್ಟ್ಲಿ’ ಕಾಫಿಗೆ ನಾನು ಯಾವತ್ತೋ ಒಂದು ದಿನ ಕೊಡುವ ದುಡ್ಡು ಲೆಕ್ಕವೇ ಎಂದು ಈಯಪ್ಪ. ಅಂತೂ, ಮೊದಲು ’ಧನಸಹಾಯ’ ಶುರುವಾದ್ದೋ ಅಥವಾ ’ಕಾಫಿ’ ಶುರುವಾಯಿತೋ ಎಂಬುದು ಯಾರಿಗೂ ನೆನಪಿರಲಿಲ್ಲ, ಬೇಕಾಗಿಯೂ ಇರಲಿಲ್ಲ.
ಅಜ್ಜಿ ರುಕ್ಕೂ ಇಬ್ಬರೂ ಅಂಗಳ ತಲುಪುತ್ತಿದ್ದಂತೆಯೇ, ಅಜ್ಜಿಯ ಹಿರಿಸೊಸೆ ತನ್ನ ಕೈಗಳಲ್ಲಿ ಮೂರು ಬಿಂದಿಗೆಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಬರುತ್ತಿದ್ದಳು. ಅಜ್ಜಿ ಓಡಿಬರುತ್ತಿರುವುದನ್ನು ನೋಡಿ, "ಓಹೋಹೋ, ಸಾಕು ಬಾರಮ್ಮ ನೀನು ಓಡಿಬರೋ ನಾಟಕ, ಎಲ್ಲೋದ್ರೇ ಅಲ್ಲೇ ಕೂತ್ಕೊಂಬುಡು, ಡಿಕಾಕ್ಷನ್ ಹಾಕಿಟ್ಟಿದ್ದೀನಿ, ಕರೆಂಟ್ ಬಂದಿದೆ, ನಾನು ನೀರಿಗೋಗ್ತೀನಿ, ಇನ್ನು ಕರೆಂಟೊಂದು ಹೊರಟೋದ್ರೆ ನೀರಿಗೂ ಗತಿಯಿಲ್ಲ" ಎಂದು ಕೂಗಿಡುತ್ತಾ ಊರಿನಲ್ಲಿ ಹೊಸದಾಗಿ ಹಾಕಿದ್ದ ನೀರಿನ ಟ್ಯಾಂಕಿನ ಕಡೆಗೆ ಹೊರಟುಬಿಟ್ಟಳು.
ಈ ಮನೆಗೆ ಬಂದು ಬಹಳ ವರ್ಷಗಳಾಗಿದ್ದರಿಂದಲೋ ಏನೋ, ತನ್ನ ಅತ್ತೆಯ ಮೇಲೆ ಜೋರು ಮಾಡುವಷ್ಟು ಗೈರತ್ತು ಬಂದುಬಿಟ್ಟಿತ್ತು ಅವಳಿಗೆ. "ಹೋ, ಕಂಡಿದ್ದೀನಿ ಹೋಗ್ತಾಯಿ ನೀನು" ಎಂದು ಅಜ್ಜಿ ಗದರಿಕೊಂಡದ್ದು ಅವಳಿಗೇನು ಕೇಳಿಸಲಿಲ್ಲ. ಅಜ್ಜಿಯ ಮೇಲೆ ಸದಾ ರೇಗುತ್ತಿದ್ದ ಇವಳನ್ನು ಕಂಡರೆ ರುಕ್ಕೂಗೆ ಸರಿಬರುತ್ತಿರಲಿಲ್ಲ. ರುಕ್ಕೂನೇ ಆಗಲಿ ಅವಳೇನು ಪ್ರೀತಿಯಿಂದ ಮಾತಾಡಿಸಿದ್ದಿಲ್ಲ. ಯಾವಾಗಲೂ ಸಿಟ್ಟು. ಮನೆಯಿಂದ ಹೊರಗಿರಬೇಕಾದವರೆಲ್ಲಾ ಇಲ್ಲೇ ಬಂದು ವಕ್ಕರಿಸಿರುವುದು ಅವಳಿಗೆ ಸರಿಕಾಣುವುದಿಲ್ಲ. ಹಾಗೆ ವಕ್ಕರಿಸಿರೋದು ಯಾರು ಅಂದ್ರೆ ರುಕ್ಕೂನೇ. ಬೇಸಿಗೆ ರಜಾ ಬಂದೊಡನೆಯೇ, ತಾತನ ದೊಡ್ಡ ಸಂಸಾರದ ಮೊಮ್ಮಕ್ಕಳೆಲ್ಲಾ ಅಜ್ಜಿ ತಾತಾರನ್ನು ಕಾಣಲು ಬರುತ್ತಾರೆ. ಅವರೆಲ್ಲರಿಗೆ ಅಡಿಗೆ ಮಾಡಿಕ್ಕೋದು, ಅವರ ಬಟ್ಟೆ ಒಗೆಯೋದು ಇವೆಲ್ಲಾ ಅವಳಿಗೆ ಆಗುವುದಿಲ್ಲ. ಮಾಡುವುದೇನೋ ಅಜ್ಜೀನೇ, ಆದರೆ, ತಾನು ತನ್ನ ಗಂಡ ಹೊಲದಲ್ಲಿ ದುಡಿದ ಅಕ್ಕಿ ಬೇಳೆ ಖರ್ಚಾಗುವುದನ್ನು ಕಂಡರೆ ಅವಳಿಗೆ ಹೊಟ್ಟೆ ಉರಿಯುತ್ತಿತ್ತು. ಆ ಬೆಳೆಯಲ್ಲಿ ಉಳಿದ ಮಕ್ಕಳು ಸೊಸೆಯರ ಪಾಲೂ ಇದೆ ಎಂಬುದನ್ನು ನೆನೆಸಿಕೊಳ್ಳಲೂ ಅವಳಿಗೆ ಇಷ್ಟವಿಲ್ಲ.
ಒಂದು ದಿನ ರುಕ್ಕೂ ಮನೆಯಲ್ಲಿ ಒಬ್ಬಳೇ ಸಿಕ್ಕಾಗ ಈ ಹಿರೀಸೊಸೆ ಅವಳಿಗೂ ಹೇಳಿದ್ದಳು
"ನಿಮ್ಮ ಅಜ್ಜಿ ಯಾರು ಹೇಳು?"
"ಇನ್ಯಾರು? ಇಲ್ಲಿದ್ದಾರಲ್ಲ ಅವರೇ ಕಮ್ಮನಳ್ಳಿ ಅಜ್ಜಿ" ರುಕ್ಕೂಗೆ ಅವಳಜ್ಜಿಯ ಹೆಸರು ಗೊತ್ತಿಲ್ಲ. ಅವಳ ಪಾಲಿಗೆ ಅವರು ’ಕಮ್ಮನಳ್ಳಿ ಅಜ್ಜಿ’.
"ಅಲ್ಲ, ನಿಮ್ಮಮ್ಮನ್ನ ಈ ಮನೆಯಿಂದ ಮದುವೆ ಮಾಡಿ, ನಿಮ್ಮಪ್ಪನ ಮನೆಗೆ ಕೊಟ್ಟಿದೆ. ಅವರು ಅಲ್ಲೇ ಇರಬೇಕು ಇಲ್ಲಿಗೆ ಬರಬಾರ್ದು".
"ಅಂದ್ರೆ, ನಮ್ಮಜ್ಜಿ ಯಾರು?"
"ಅಂದ್ರೆ, ನಿಮ್ಮಪ್ಪ ಅವರ ಅಮ್ಮ ಇದ್ದಾರಲ್ಲ , ಬೆಂಗಳೂರು ಅಜ್ಜಿ, ಅವರು ಮಾತ್ರಾನೇ ನಿಂಗೆ ಅಜ್ಜಿ. ಇವರಲ್ಲ. ಯಾತಕ್ಕೆ ಇವರ ಹಿಂದಿಟ್ಟುಕೊಂಡಿರ್ತೀಯ ಯಾವಾಗಲೂ?"
ಈ ಮಾತನ್ನು ಕೇಳಿ ರುಕ್ಕೂಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ಇದನ್ನು ಯಾರೊಟ್ಟಿಗಾದರೂ ಹೇಳಿಕೊಳ್ಳಲೂ ಇಲ್ಲ. ತನ್ನಷ್ಟಕ್ಕೆ ತಾನು ಎಂದಿನಂತೆಯೆ ಇದ್ದುಬಿಟ್ಟಳು. ಅವರು ಏನು ಹೇಳುತ್ತಿದ್ದಾರೆಂಬುದನ್ನು ಮನಸ್ಸಿಗೆ ತಂದುಕೊಳ್ಳುವಷ್ಟು ಬುದ್ಧಿಯೂ ಅವಳಿಗೆ ಇರಲಿಲ್ಲ.
ಬೆನ್ನಮೇಲೆ ಮೂಟೆಯೊಂದನ್ನು ಹೊತ್ತುಕೊಂಡು ತಮ್ಮ ಮನೆ ಕಡೆಗೇ ಬರುತ್ತಿದ್ದ ವೆಂಕಟರಾಜನನ್ನು ಗಮನಿಸಿದ ರುಕ್ಕೂ, ಒಳಗೋಡುತ್ತಿದ್ದ ಅಜ್ಜಿಯನ್ನು ಕೂಗಿ ಕರೆದಳು.
"ಹೋ, ಬಾಪ್ಪೋ, ಅದೇನು ಇಷ್ಟು ಬೇಗ..."
"ಮೊದಲ್ ಮೂಟೆನಮ್ಮಾ, ಒಣಾಕ್ ಬುಡ್ತೀನಿ ಇಲ್ಲೇ"
"ಬೇಡ ಬೇಡ, ಹೊತ್ತು ಮುಳುಗ್ತಾ ಇದೆ, ನಾಳೆ ನಾವೇ ಹಾಕ್ಕೊಳ್ತೇವೇಳು, ಅಗೋ ಆ ಮಡೂನಲ್ಲಿ ಇಟ್ಬುಡು ಹೋಗು".
ಅಜ್ಜಿ ಏನೋ ಭಾರಿ ಖುಷಿಯಾದ ಹಾಗೆ ಇತ್ತು. ವೆಂಕಟರಾಜು ತಂದಿದ್ದು ಒಂದು ಮೂಟೆ ಭತ್ತವನ್ನು. ಅಂಗಳದಲ್ಲೇ ಸುರಿದು ಬಿಟ್ಟರೆ, ಮನೆಗೆ ಬರುತ್ತಿದ್ದಂತೆಯೇ ಅಜ್ಜಿಯ ಮಗನು ನೋಡುತ್ತಾನೆಂದು ಆಸೆ ಅವನಿಗೆ. ಅದು ಕೈಗೂಡಲಿಲ್ಲ. ಅವನಿಗೇನು ಅದರಿಂದ ಬೇಸರವಾಗಲಿಲ್ಲ.
ಬಿತ್ತನೆ ಮಾಡುವ ಹೊತ್ತಿಗೆ ಅವನ ಬಾವಿಯಲ್ಲಿ ನೀರು ಬತ್ತಿಹೋಗಿತ್ತು. ಊರಿಗೆ ವಿದ್ಯಾವಂತನಾದ ಅಜ್ಜಿಯ ಮಗನು ಆಗಲೇ ಕೊಳವೆ ಬಾವಿ ಕೊರೆಸಿದ್ದ. ಗಂಗಾದೇವಿಯು ಭಾಳ ಖುಷಿಗೊಂಡು, ಕೆಳಗಿಂದ ಮೇಲಕ್ಕೆ ಬೇಕುಬೇಕೆಂದಾಗಲೆಲ್ಲಾ ಚಿಮ್ಮುತ್ತಿದ್ದಳು. ಆ ಕಾಲಕ್ಕೆ ಅಜ್ಜಿಯ ಮಗ ಅವನ ತೋಟಕ್ಕೆ ನೀರು ಬಿಟ್ಟಿದ್ದಕ್ಕೆ, ಈಗ ಒಂದು ಮೂಟೆ ಭತ್ತ ಇವರಿಗೆ ಬಂದು ಇಳಿದಿದ್ದು. ಇನ್ನು ಈ ಭತ್ತದಿಂದ ಅಜ್ಜಿಯ ಮಗ ಗದ್ದೆ ಮಾಡುವವನಿದ್ದ.
A Traditional Baby Shower And Kosumallis With A Twist
-
*A TRADITIONAL BABY SHOWER AND KOSUMALLIS WITH A TWIST*
The sacred chants of Vedic Mantras are still resonating in my mind , even
after the Valaikap...
1 ವಾರದ ಹಿಂದೆ

